あらすじ
ಪ್ರತಿಷ್ಠಿತ ‘ಛಂದ ಪುಸ್ತಕ ಬಹುಮಾನ’ ಪಡೆದಿರುವ ಶ್ರೀ ಗುರುರಾಜ ಕುಲಕರ್ಣಿ ಅವರ ಈ ಸಂಕಲನದ ಕತೆಗಳು ಸಿದ್ಧ ಮಾದರಿಯ ಕತೆಗಳಿಗಿಂತ ವಿಭಿನ್ನವಾಗಿ ಚಿತ್ರಿತಗೊಂಡಿವೆ. ನವೀನ ತಂತ್ರಜ್ಞಾನದ ಕುರಿತು ಹೆಚ್ಚಿನ ಅರಿವಿಲ್ಲದವರಿಗೂ ತಿಳಿಯುವಂತೆ ಸರಳ ಭಾಷೆಯಲ್ಲಿ, ಸರಾಗವಾಗಿ ಕತೆ ಹೇಳಿದ್ದಾರೆ ಕುಲಕರ್ಣಿ. ಕತೆಗಳ ವೈವಿಧ್ಯ, ಭಾಷೆಯನ್ನು ಸಮರ್ಥವಾಗಿ, ಸುಲಲಿತವಾಗಿ ಬಳಸಿಕೊಂಡ ರೀತಿ, ಕತೆ ಹೇಳುವಲ್ಲಿನ ಲವಲವಿಕೆಯ ಗುಣದಿಂದಾಗಿ ಈ ಸಂಕಲನ ಛಂದ ಪುಸ್ತಕ ಬಹುಮಾನಕ್ಕೆ ಆಯ್ಕೆಯಾಗಿದೆ. ಕನ್ನಡ ಸಾಹಿತ್ಯದ ಮಟ್ಟಿಗೆ ಅಪರೂಪ ಎನಿಸುವಂತಹ ಹಲವು ಕತೆಗಳು ಸಂಕಲನದಲ್ಲಿ ಗಮನ ಸೆಳೆಯುವಂತಿವೆ. ಕೊರಳ ಪಟ್ಟಿಯಲ್ಲಿರುವ ಟ್ರಾನ್ಸ್ಮಿಟರ್ ಮೂಲಕ ಮಿದುಳಿನೊಂದಿಗೆ ಸಂವಹನ ಸಾಧಿಸುವ ಸಾಧ್ಯತೆಯ ಕತೆ, ಲಭ್ಯವಿರುವ ಅಗಾಧ ಪಠ್ಯಗಳನ್ನೆಲ್ಲಾ ಸಂಸ್ಕರಿಸಿ ಒಂದು ನುಡಿ ಮಾದರಿ ತಯಾರಿಸಿಟ್ಟುಕೊಂಡು ಅದರಂತೆ ತಮಗೆ ಬೇಕಾದ ಪಠ್ಯವನ್ನು ತಾವೇ ಬರೆದಂತೆ ಬಿಂಬಿಸಿಕೊಳ್ಳಬಹುದಾದ ಸಾಧ್ಯತೆಯ ಕತೆ, ಮನುಷ್ಯರಿಗೆ ಸೆನ್ಸರ್ ಸಿಸ್ಟಮ್ ಅಳವಡಿಸಿ ಆರೋಗ್ಯ ತಪಾಸಣೆ ಮಾಡಬಹುದಾದ ಪ್ರಾಜೆಕ್ಟಿನ ಕುರಿತಾದ ಕತೆ, ಅರೆ ಆಯುಷ್ಯದಲ್ಲಿ ಸತ್ತ ಅತೃಪ್ತ ಆತ್ಮಗಳಿಂದ ಕೆಲಸ ಮಾಡಿಸಿಕೊಳ್ಳುವ ಕತೆ, ಹೊಲ ಮಾಡಬೇಕೆಂಬ ಆಸೆ ಅಜ್ಜಿಯ ರೂಪದಲ್ಲಿ ಕನಸಾಗಿ ಕಾಡುವ ಕತೆ- ಇಂತಹ ಕತೆಗಳು ಒಗ್ಗೂಡಿ ಸಂಕಲನದ ಮೌಲ್ಯವನ್ನು ಹೆಚ್ಚಿಸಿವೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ವಿಡಂಬನೆ, ಲಘು ಹಾಸ್ಯ, ದಾರುಣತೆ- ಹೀಗೆ ವೈವಿಧ್ಯಮಯ ಕತೆಗಳಿಂದ ಈ ಸಂಕಲನವು ಕನ್ನಡ ಸಾಹಿತ್ಯ ಲೋಕಕ್ಕೆ ಗಮನಾರ್ಹ ಕೊಡುಗೆಯಾಗಿದೆ. - ವಸುಮತಿ ಉಡುಪ ಛಂದ ಪುಸ್ತಕದ ಪ್ರಕಟಣೆ / A book by Chanda Pustaka